#ಮುನ್ನುಡಿ...
1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ.
#ಬಿ_ರೇಣುಕೇಶ್, ಪತ್ರಕರ್ತರು.
#I have been working in the field of journalism for the last 26 - 27 years. I started @UdayaSaakshi YouTube news channel and www.udayasaakshi.com news website. Please support...
#B_Renukesha, Journalist
Udaya Saakshi
‘ಗ್ರಾಹಕ ಆರ್ಡರ್ ಮಾಡಿದ್ದು ಸಸ್ಯಹಾರಿ ಬರ್ಗರ್, ಬಂದಿದ್ದು ಮಾಂಸಹಾರಿ!’ : ಜಿಲ್ಲಾ ಗ್ರಾಹಕ ಆಯೋಗದಿಂದ ದಂಡ ವಿಧಿಸಿ ತೀರ್ಪು
ಶಿವಮೊಗ್ಗ ಜು, 14: ಗ್ರಾಹಕರೊಬ್ಬರು ಆರ್ಡರ್ ಮಾಡಿದ ಸಸ್ಯಹಾರಿ ಬರ್ಗರ್ ಬದಲಿಗೆ, ಮಾಂಸಹಾರಿ ಬರ್ಗರ್ ನೀಡಿ ಸೇವಾನ್ಯೂನತೆ ಎಸಗಿದ ಆರೋಪದ ಮೇರೆಗೆ, ಆನ್ಲೈನ್ ಆಹಾರ ವಿತರಣಾ ಸಂಸ್ಥೆ 'ಜೊಮೊಟೊ' ಹಾಗೂ ಸಂಬಂಧಪಟ್ಟ ಹೋಟೆಲ್ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶ ಹೊರಡಿಸಿದೆ.
ಏನೀದು ಪ್ರಕರಣ? : ಶಿವಮೊಗ್ಗದ ಜೆ.ಪಿ.ಎನ್ ರಸ್ತೆಯ ನಿವಾಸಿ ನಂದೀಶ್ ಎಂಬುವವರು 2025 ಆಗಸ್ಟ್ 27 ರಂದು ಗಣೇಶ ಚತುರ್ಥಿ ಹಬ್ಬದ ದಿನದಂದು, ‘ಜೊಮೊಟೊ ಆ್ಯಪ್’ ಮೂಲಕ ಸಸ್ಯಹಾರಿ ಬರ್ಗರ್ ಆರ್ಡರ್ ಮಾಡಿದ್ದರು. ಇದಕ್ಕಾಗಿ ಅವರು ರೂ. 313.15 ಪಾವತಿಸಿದ್ದರು.
ಆದರೆ ಹಬ್ಬದ ದಿನದಂದೇ ಅವರಿಗೆ ಸಸ್ಯಹಾರದ ಬದಲಾಗಿ, ಮಾಂಸಹಾರಿ ಬರ್ಗರ್ ಅನ್ನು ವಿತರಿಸಲಾಗಿತ್ತು. ಈ ಬಗ್ಗೆ ಅವರು ಸಂಸ್ಥೆಗೆ ದೂರು ನೀಡಿದಾಗ, ಸಂಸ್ಥೆಯು ಬರ್ಗರ್ನ ಹಣವನ್ನು ದೂರುದಾರರ ಖಾತೆಗೆ ಮರುಪಾವತಿಸಿತ್ತು.
ಆದರೆ ಗಣೇಶ ಹಬ್ಬ ಆಚರಿಸುತ್ತಿದ್ದ ಸಂದರ್ಭದಲ್ಲಿಯೇ, ಮನೆಯೊಳಗೆ ಮಾಂಸಹಾರಿ ಬರ್ಗರ್ ತಲುಪಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ನಂದೀಶ್ ಅವರು ವಕೀಲರ ಮೂಲಕ ಜೊಮೊಟೊ ಇಂಡಿಯಾ ಸಂಸ್ಥೆಯ ಹರಿಯಾಣದ ಗುರುಗಾಂವ್ ನಲ್ಲಿರುವ ಸಿ.ಇ.ಓ, ಬೆಂಗಳೂರಿನ ಜೋನಲ್ ಹೆಡ್ ಹಾಗೂ ಶಿವಮೊಗ್ಗದ ಫೈವ್ ಸ್ಟಾರ್ ದರ್ಶನ್ ಕಾಂಪ್ಲೆಕ್ಸ್ನ ಹೋಟೆಲ್ ಮಾಲೀಕರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರನ್ನು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆ ವೇಳೆ ಜೊಮೊಟೊ ಸಂಸ್ಥೆಯು, "ತಮ್ಮದು ಕೇವಲ ಆರ್ಡರ್ ತೆಗೆದುಕೊಳ್ಳುವ ವೇದಿಕೆಯಾಗಿದ್ದು (ಫ್ಲ್ಯಾಟ್’ಫಾರ್ಮ್), ಗ್ರಾಹಕರು ನೇರವಾಗಿ ಹೋಟೆಲ್ಗೆ ಆರ್ಡರ್ ಮಾಡಿರುತ್ತಾರೆ. ಇದರಲ್ಲಿ ನಮ್ಮ ಯಾವುದೇ ಲೋಪ ಅಥವಾ ಸೇವಾನ್ಯೂನತೆ ಇರುವುದಿಲ್ಲ" ಎಂದು ವಾದಿಸಿತ್ತು.
ಆದರೆ ಉಭಯ ಪಕ್ಷಗಳ ವಾದ-ವಿವಾದಗಳು ಮತ್ತು ದೂರುದಾರರು ಸಲ್ಲಿಸಿದ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು, ಎದುರುದಾರರು ಸೇವಾನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿತು.
1 ರಿಂದ 3 ನೇ ಎದುರುದಾರರಾದ ಜೊಮೊಟೊ ಸಿ.ಇ.ಒ, ಜೋನಲ್ ಹೆಡ್ ಮತ್ತು ಹೋಟೆಲ್ ಮಾಲೀಕರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ರೂ. 10,000/- ಗಳನ್ನು ಮಾನಸಿಕ ಹಿಂಸೆಗಾಗಿ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ, ಈ ಮೊತ್ತಕ್ಕೆ ವಾರ್ಷಿಕ ಶೇ. 12 ರಷ್ಟು ಬಡ್ಡಿ ಸೇರಿಸಿ ಪಾವತಿಸತಕ್ಕದ್ದು.
ಪ್ರಕರಣದ ವೆಚ್ಚಕ್ಕಾಗಿ ರೂ. 10,000/- ಗಳನ್ನು ಸಹ 45 ದಿನಗಳ ಒಳಗೆ ಪಾವತಿಸಬೇಕು. ಇದಕ್ಕೂ ತಪ್ಪಿದಲ್ಲಿ ವಾರ್ಷಿಕ ಬಡ್ಡಿ ದರ ಅನ್ವಯವಾಗಲಿದೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ. ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಜುಲೈ 9 ರಂದು ಆದೇಶಿಸಿದೆ.
Shivamogga, July 14: The Shivamogga District Consumer Disputes Redressal Commission has ordered the online food delivery platform 'Zomato' and a hotel to pay a fine for deficiency in service - after a non-vegetarian burger was delivered instead of the vegetarian burger ordered by a customer.
18 hours ago | [YT] | 3
View 0 replies
Udaya Saakshi
ಶಿವಮೊಗ್ಗ ಪಾಲಿಕೆ ಆಡಳಿತಕ್ಕೆ ಸರ್ಕಾರಿ ಶಾಲೆ ಮಕ್ಕಳು ಕೃತಜ್ಞತೆ ಸಲ್ಲಿಸಿದ್ದೇಕೆ?
ಶಿವಮೊಗ್ಗ, ಜುಲೈ 13: ಶಿವಮೊಗ್ಗ ನಗರದ ಸೋಮಿನಕೊಪ್ಪದ ಎಂ.ಎ.ಎಂ.ಇ.ಎಸ್ ಸರ್ಕಾರಿ ಶಾಲೆ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಬೆಳೆದಿದ್ದ ಪೊದೆ, ಗಿಡಗಂಟೆಗಳನ್ನು ಜುಲೈ 13 ರಂದು ಮಹಾನಗರ ಪಾಲಿಕೆ ಆಡಳಿತ ಜೆಸಿಬಿ ಮೂಲಕ ತೆರವುಗೊಳಿಸಿ ಸ್ವಚ್ಛಗೊಳಿಸಿದೆ.
ಕಳೆದ ಹಲವು ದಿನಗಳಿಂದ ಶಾಲಾ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಪೊದೆ, ಗಿಡಗಂಟೆ ಬೆಳೆದುನಿಂತಿತ್ತು. ಹುಳುಹುಪ್ಪಟ್ಟೆ, ವಿಷಜಂತುಗಳ ಹಾವಳಿ ಹೆಚ್ಚಾಗಿತ್ತು.
ಇತ್ತೀಚೆಗೆ ನಾಗರಹಾವೊಂದು ಶಾಲೆಯ ಬಳಿ ಕಾಣಿಸಿಕೊಂಡಿತ್ತು. ಇದರಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆ ಸುತ್ತಮುತ್ತಲಿನ ಅವ್ಯವಸ್ಥೆಯ ಸರಿಪಡಿಸಿ ಕೊಡುವಂತೆ ಮಹಾನಗರ ಪಾಲಿಕೆ ಆರೋಗ್ಯ – ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಪ್ರಭಾಕರ್ ಅವರಿಗೆ ಪೋಷಕರು ಮನವಿ ಮಾಡಿದ್ದರು.
ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಪ್ರಭಾಕರ್ ಅವರು, ಸೋಮವಾರ ಜೆಸಿಬಿ ಚಾಲಕ ಬಸವರಾಜ್ ಮೂಲಕ ಶಾಲಾ ಸುತ್ತಮುತ್ತಲು ಬೆಳೆದಿದ್ದ ಭಾರೀ ಪ್ರಮಾಣದ ಗಿಡಗಂಟೆ, ಪೊದೆಗಳನ್ನು ತೆರವುಗೊಳಿಸಿ ಕೊಟ್ಟಿದ್ದಾರೆ.
ಪಾಲಿಕೆ ಆಡಳಿತದ ತ್ವರಿತ ಸ್ಪಂದನೆಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಜೆಸಿಬಿ ಚಾಲಕ ಬಸವರಾಜ್ ಅವರಿಗೆ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
1 day ago | [YT] | 6
View 0 replies
Udaya Saakshi
ಶಿವಮೊಗ್ಗ : ಜಲಮಂಡಳಿ ನಿರ್ಲಕ್ಷ್ಯದಿಂದ ವ್ಯರ್ಥವಾಗುತ್ತಿದೆ ಅಪಾರ ಪ್ರಮಾಣದ ಕುಡಿಯುವ ನೀರು – ಶಾಸಕರೆ ಗಮನಿಸಿ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜುಲೈ 13: ಒಂದೆಡೆ ಕಳೆದೊಂದು ವಾರದಿಂದ, ಶಿವಮೊಗ್ಗ ನಗರದ ವಿವಿಧೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮತ್ತೊಂದೆಡೆ, ಅಪಾರ ಪ್ರಮಾಣದ ಕುಡಿಯುವ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ..!
ಇದು ವಿಚಿತ್ರವಾದರೂ ಸತ್ಯವಾಗಿದೆ...! ನಗರದ ದೇವರಾಜ ಅರಸು ಬಡಾವಣೆ ಸಮೀಪವಿರುವ ಓವರ್ ಹೆಡ್ ಟ್ಯಾಂಕ್ ಬಳಿ ಬರೋಬ್ಬರಿ ಕಳೆದೊಂದು ವರ್ಷದಿಂದ ಟ್ಯಾಂಕ್ ಗೆ ನೀರು ಪೂರೈಕೆಯ ಬೃಹತ್ ಪೈಪ್ ಒಡೆದು ಹೋಗಿದೆ. ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.
ಈ ಹಿಂದೆ ಸ್ಥಳೀಯ ನಾಗರಿಕರ ಕೋರಿಕೆಯಂತೆ, ವಿವಿಧ ರಾಜಕೀಯ ಪಕ್ಷಗಳ ನಾಯಕರು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದ್ದಾರೆ. ಪೈಪ್ ಸರಿಪಡಿಸುವಂತೆ ಜಲ ಮಂಡಳಿ ಆಡಳಿತಕ್ಕೆ ಸೂಚಿಸಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಜಲ ಮಂಡಳಿ ಆಡಳಿತ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ!
ಇದೆಲ್ಲದರ ನಡುವೆ, ಸದರಿ ಟ್ಯಾಂಕ್ ಆವರಣದಲ್ಲಿಯೇ ಇತ್ತೀಚೆಗೆ ಮತ್ತೊಂದು ಪೈಪ್ ಒಡೆದು ನೀರು ಹರಿಯುತ್ತಿದೆ. ಇದರಿಂದ ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.
ಕೊಳಚೆ ಗುಂಡಿಯಾದ ಪಾರ್ಕ್ : ಓವರ್ ಹೆಡ್ ಟ್ಯಾಂಕ್ ಇರುವ ಪಾರ್ಕ್ ನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳಿಸಲಾಗದೆ. ವಾಕಿಂಗ್ ಪಾಥ್ ಸೇರಿದಂತೆ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಹಾಕಲಾಗಿದೆ. ಈ ಹಿಂದೆ ಪ್ರತಿನಿತ್ಯ ನಾಗರಿಕರು ಪಾರ್ಕ್ ಗೆ ಭೇಟಿ ನೀಡುತ್ತಿದ್ದರು.
ಆದರೆ ಪೈಪ್ ನಿಂದ ಹರಿಯುತ್ತಿರುವ ನೀರಿನಿಂದ ಇಡೀ ಪಾರ್ಕ್ ಸಂಪೂರ್ಣ ಕೊಳಚೆ ಗುಂಡಿಯಂತಾಗಿ ಮಾರ್ಪಟ್ಟಿದೆ. ವಾಕಿಂಗ್ ಪಾಥ್, ಮಕ್ಕಳ ಆಟಿಕೆ ಸಾಮಗ್ರಿಗಳು ನೀರಿನಲ್ಲಿ ಹಾಳಾಗುತ್ತಿವೆ. ಇದರಿಂದ ಯಾರೊಬ್ಬರು ಪಾರ್ಕ್ ಗೆ ಭೇಟಿ ನೀಡುತ್ತಿಲ್ಲ. ಇಡೀ ಪಾರ್ಕ್ ಪಾಳು ಬೀಳಲಾರಂಭಿಸಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಿರ್ಲಕ್ಷ್ಯವೇಕೆ? : ಓವರ್ ಹೆಡ್ ಟ್ಯಾಂಕ್ ನ ಪೈಪ್ ಒಡೆದು ನೀರು ವ್ಯರ್ಥವಾಗುತ್ತಿರುವ ವಿಷಯ ಜಲ ಮಂಡಳಿ ಆಡಳಿತದ ಗಮನಕ್ಕಿದೆ. ಆದರೆ ವರ್ಷ ಕಳೆದರೂ ಪೈಪ್ ಲೈನ್ ದುರಸ್ತಿಗೊಳಿಸದೆ ನಿರ್ಲಕ್ಷ್ಯ ಮಾಡುತ್ತಿರುವುದೇಕೆ? ಎಂಬುವುದು ಗೊತ್ತಾಗುತ್ತಿಲ್ಲವಾಗಿದೆ.
ಈ ಕುರಿತಂತೆ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಅವರು ಚಿತ್ತ ಹರಿಸಬೇಕಾಗಿದೆ. ಕಾಲಮಿತಿಯೊಳಗೆ ಪೈಪ್ ದುರಸ್ತಿ ಮಾಡಿಸಿ, ವ್ಯರ್ಥವಾಗಿ ಹರಿಯುತ್ತಿರುವ ಕುಡಿಯುವ ನೀರಿಗೆ ಕಡಿವಾಣ ಹಾಕಬೇಕು. ಹಾಗೂ ಜಲ ಮಂಡಳಿ ಆಡಳಿತದಿಂದಲೇ ಪಾರ್ಕ್ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
1 day ago | [YT] | 3
View 0 replies
Udaya Saakshi
ಶಿವಮೊಗ್ಗ : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ
ಶಿವಮೊಗ್ಗ, ಜುಲೈ 13: ಶಿವಮೊಗ್ಗ ತಾಲೂಕಿನ ಬಿ ಬೀರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್ ನ ವಸತಿ ಶಾಲೆಯಲ್ಲಿ ಜುಲೈ 13 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮ ಪಂಚಾಯ್ತಿ ಆರೋಗ್ಯ ಇಲಾಖೆ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಾಲನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳು, ಸಾಮಾಜಿಕ ಜಾಲತಾಣ ಸುರಕ್ಷತೆ, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ, ಮಕ್ಕಳ ಸಾಗಾಣಿಕೆ, ಬಾಲ ಗರ್ಭಿಣಿ, ಬಾಲ ಕಾರ್ಮಿಕತೆ ದತ್ತು ನಿಯಮಾವಳಿ ಹಾಗೂ ಪೋಷಕತ್ವ ಯೋಜನೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತಂತೆ ಮಾಹಿತಿ ನೀಡಿದರು. ಉತ್ತಮ ವ್ಯಕ್ತಿತ್ವ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಆತಿಥಿಯಾಗಿ ಬಿ ಬೀರಿನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಸಂತೋಷ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಾಕೀರ್ ಹುಸೇನ್, ಸಿಡಿಪಿಓ ಕಚೇರಿಯ ವಲಯ ಮೇಲ್ವಿಚಾರಕರಾದ ಮಧು ಮಾಲತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಭರತ್ ಎಸ್ ಎಂ ಹಾಗೂ ಮಕ್ಕಳ ಸಹಾಯವಾಣಿ ಸಂಯೋಜಕರಾದ ಅಭಿಷೇಕ್ ಅವರು ಉಪಸ್ಥಿತರಿದ್ದರು.
#shimoga #ShivamoggaNews #shivamogga #NewsUpdate #school
1 day ago | [YT] | 14
View 0 replies
Udaya Saakshi
ಶಿವಮೊಗ್ಗ ತಾಲೂಕಿನಲ್ಲಿ ಮುಂಗಾರು ಮಳೆ ಇಳಿಮುಖ : ಕೆರೆಗಳಿಗೆ ತುಂಗಾ ನದಿ ನೀರು ಹರಿಯುವುದು ಯಾವಾಗ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜುಲೈ 13: ಶಿವಮೊಗ್ಗ ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ಇಳಿಮುಖವಾಗಿದೆ. ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದೆ. ಬೇಸಿಗೆಯ ಬಿಸಿಲು ಬೀಳಲಾರಂಭಿಸಿದೆ.
ಮತ್ತೊಂದೆಡೆ, ಇತ್ತೀಚೆಗೆ ಭಾರೀ ಮಳೆ ಹಾಗೂ ತುಂಗಾ ಡ್ಯಾಂನಿಂದ ನೀರು ಹೊರಬಿಟ್ಟ ಕಾರಣದಿಂದ ಶಿವಮೊಗ್ಗ ನಗರ ಹಾಗೂ ತಾಲೂಕಿನ ಇತರೆಡೆ ಉಕ್ಕಿ ಹರಿಯುತ್ತಿದ್ದ ತುಂಗಾ ನದಿಯು, ಇದೀಗ ಸಹಜ ಸ್ಥಿತಿಗೆ ಮರಳಲಾರಂಭಿಸಿದೆ.\ ನೀರಿನ ಹರಿವಿನಲ್ಲಿ ಗಣನೀಯ ಇಳಿಕೆಯಾಗಲಾರಂಭಿಸಿದೆ.
ಆದರೆ ತುಂಗಾ ನದಿಯಿಂದ ಕೆರೆಗಳಿಗೆ ನೀರು ಪೂರೈಕೆ ಮಾಡುವ ಶಿವಮೊಗ್ಗ ತಾಲೂಕಿನ ಹೊಳೆಹನಸವಾಡಿ ಏತ ನೀರಾವರಿ ಯೋಜನೆಯಡಿ, ಕೆರೆಗಳಿಗೆ ನೀರು ಪೂರೈಕೆಯ ಕಾರ್ಯ ಆರಂಭವಾಗಿಲ್ಲ ಎಂಬ ಮಾಹಿತಿ ಸ್ಥಳೀಯ ಗ್ರಾಮಸ್ಥರಿಂದ ಕೇಳಿಬರಲಾರಂಭಿಸಿದೆ.
ಬಿಕ್ಕೋನಹಳ್ಳಿ, ಬಸವನಗಂಗೂರು, ಕೊಮ್ಮನಾಳು, ಬೀರನಕೆರೆ, ಕುಂಚೇನಹಳ್ಳಿ, ಅಬ್ಬಲಗೆರೆ, ತ್ಯಾಜವಳ್ಳಿ, ಕಲ್ಲಾಪುರ, ಹುಣಸೋಡು ಸುತ್ತಮುತ್ತಲಿನ 22 ಕ್ಕೂ ಅಧಿಕ ಕೆರೆಗಳಿಗೆ ತುಂಗಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತದೆ.
ಕಳೆದ ವಾರ ಭಾರೀ ಮಳೆಯಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದ ವೇಳೆಯೇ, ಕೆರೆಗಳಿಗೆ ನೀರು ಪೂರೈಕೆಯ ವ್ಯವಸ್ಥೆ ಮಾಡಬೇಕಾಗಿತ್ತು. ಸದ್ಯ ಮಳೆ ಕಣ್ಮರೆಯಾಗಿದೆ. ಬಿಸಿಲು ಬೀಳುತ್ತಿದೆ. ಯಾವಾಗ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂಬುವುದು ಸ್ಪಷ್ಟವಾಗುತ್ತಿಲ್ಲ ಎಂದು ಕೆಲ ರೈತರು ಪ್ರಶ್ನಿಸುತ್ತಿದ್ದಾರೆ.
ನೀರು ಹರಿಸಲಿ : ಪ್ರಸ್ತುತ ತುಂಗಾ ಜಲಾಶಯದಿಂದ ಬಿಡುತ್ತಿರುವ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಬಿಸಿಲು ಬೀಳಲಾರಂಭಿಸಿದೆ. ಜುಲೈ 13 ರಂದು 5182 ಕ್ಯೂಸೆಕ್ ಒಳಹರಿವಿದ್ದು, 5506 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ತುಂಗಾ ನದಿ ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ.
ಕೆರೆಗಳಿಗೆ ನೀರು ಹರಿಸುವುದು ಇನ್ನಷ್ಟು ವಿಳಂಬವಾದರೆ, ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಯಾಗಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಕಾಲಮಿತಿಯೊಳಗೆ ಕೆರೆಗಳಿಗೆ ನೀರು ಹರಿಸುವ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
1 day ago | [YT] | 5
View 0 replies
Udaya Saakshi
ಮಲೆನಾಡಿನಲ್ಲಿ ಮುಂಗಾರು ಮಳೆ ದುರ್ಬಲ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಗಣನೀಯ ಕುಸಿತ!
ಶಿವಮೊಗ್ಗ, ಜುಲೈ 13: ಕಳೆದೊಂದು ವಾರದ ಹಿಂದೆ ಧಾರಾಕಾರ ಮಳೆಗೆ ಸಾಕ್ಷಿಯಾಗಿದ್ದ ಮಲೆನಾಡು ಭಾಗದಲ್ಲಿ, ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಮಳೆಯ ಪ್ರಮಾಣ ಸಂಪೂರ್ಣ ಇಳಿಮುಖವಾಗಿದೆ. ಇದರಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಕುಸಿತ ಕಂಡುಬಂದಿದೆ.
13/07/2026 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ವಿವರ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 7 ಮಿಲಿ ಮೀಟರ್ (ಮಿ.ಮೀ.), ಯಡೂರು 10 ಮಿ.ಮೀ., ಹುಲಿಕಲ್ 5 ಮಿ.ಮೀ., ಮಾಸ್ತಿಕಟ್ಟೆ 8 ಮಿ.ಮೀ., ಚಕ್ರಾ 10 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 6 ಮಿ.ಮೀ ಮಳೆಯಾಗಿದೆ.
ಉಳಿದಂತೆ ಶಿವಮೊಗ್ಗದಲ್ಲಿ 0.00 ಮಿ.ಮೀ., ಭದ್ರಾವತಿ 0.30 ಮಿ.ಮೀ., ತೀರ್ಥಹಳ್ಳಿ 0.60 ಮಿ.ಮೀ., ಸಾಗರ 0.60 ಮಿ.ಮೀ., ಶಿಕಾರಿಪುರ 0.30 ಮಿ.ಮೀ., ಸೊರಬ 0.00 ಮಿ.ಮೀ. ಹಾಗೂ ಹೊಸನಗರದಲ್ಲಿ 0.70 ಮಿ.ಮೀ. ಮಳೆಯಾಗಿದೆ.
ಡ್ಯಾಂಗಳ ವಿವರ : ಸೋಮವಾರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ ಒಳಹರಿವು 4999 ಕ್ಯೂಸೆಕ್ ಇದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಡ್ಯಾಂ ನೀರಿನ ಮಟ್ಟ 1762.90 (ಗರಿಷ್ಠ ಮಟ್ಟ : 1819) ಅಡಿಯಿದೆ.
ಭದ್ರಾ ಜಲಾಶಯದ ಒಳಹರಿವು 1713 ಕ್ಯೂಸೆಕ್ ಇದ್ದು, 220 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 147 ಅಡಿ 4 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ತುಂಗಾ ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪಿದೆ. 5182 ಕ್ಯೂಸೆಕ್ ಒಳಹರಿವಿದ್ದು, 5506 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
1 day ago | [YT] | 6
View 0 replies
Udaya Saakshi
ಶಿವಮೊಗ್ಗ : ಪಾಳುಬಿದ್ದ ಪಾರ್ಕ್ ಸ್ವಚ್ಛಗೊಳಿಸಿ ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ಹೊತ್ತ ನಿವಾಸಿಗಳು
ಶಿವಮೊಗ್ಗ, ಜುಲೈ 12: ಶಿವಮೊಗ್ಗ ನಗರದ ಹೊರವಲಯ ಮತ್ತೋಡು ಸಮೀಪದ ಫಾರ್ಚೂನ್ ಬಡಾವಣೆಯ ಉದ್ಯಾನವನದಲ್ಲಿ ಜುಲೈ 12 ರಂದು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಶ್ರೀವಿನಾಯಕ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ಶ್ರೀ ವಿನಾಯಕ ಮಹಿಳಾ ಕ್ಷೇಮಾಭಿವೃದ್ದಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಫಾರ್ಚೂನ್ ಹೋಂ ಲೇಔಟ್, ಧನಲಕ್ಷ್ಮೀ ಲೇಔಟ್, ಬೃಂದಾವನ ಲೇಔಟ್, ವಿಭು ಲೇಔಟ್, ಸಾಲ್ಡಾನಾ ಲೇಔಟ್, ಜೆ ಪಿ ಲೇಔಟ್, ವಿಜಯಲಕ್ಷ್ಮೀ ಬಡಾವಣೆ, ಶ್ರೀಧರ್ ಲೇಔಟ್ ನಿವಾಸಿಗಳು ಉದ್ಯಾನವನ ಸ್ವಚ್ಛಗೊಳಿಸಿ, ಸುಮಾರು 200 ಗಿಡಗಳನ್ನು ನೆಟ್ಟು ಪಾಲನೆ – ಪೋಷಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಪಿಡಿಓ ರಾಜಪ್ಪ ಹೆಚ್, ಸಿಮ್ಸ್ ಕಾಲೇಜ್ ನ ಚರ್ಮ ವಿಭಾಗದ ಹೆಚ್ಓಡಿ ಡಾ. ದಾದಾಪೀರ್ ಹೆಚ್ ಜೆ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ನ ಪ್ರೊಫೆಸರ್ ಡಾ. ಮಂಜುನಾಥ್ ಎಂ, ಚರ್ಮರೋಗ ತಜ್ಞರಾದ ಡಾ. ಆದಿನಾಥ್ ಭಂಡರಾಕರ್, ಪರಿಸರ ಪ್ರೇಮಿ ನವಶ್ರೀ ನಾಗೇಶ್ ಡಿ, ಪತ್ರಕರ್ತರಾದ ಬಿ ರೇಣುಕೇಶ್ ಅವರು ಭಾಗಿಯಾಗಿದ್ದರು.
ಉಳಿದಂತೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಸಿದ್ದೇಶ್ವರಪ್ಪ ವೈ ಎಂ, ಗೌರವಾಧ್ಯಕ್ಷರಾದ ಶೇಖರಪ್ಪ, ಉಪಾಧ್ಯಕ್ಷ ಸತೀಶ್ ಕೆ ಎಲ್, ಕಾರ್ಯದರ್ಶಿ ಬಸವರಾಜಪ್ಪ ಜಿ ಪಿ, ಜಂಟಿ ಕಾರ್ಯದರ್ಶಿ ಸತೀಶ್ ಎ ಜಿ, ಖಜಾಂಚಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕಣ್ಣದಾಸ್ ಕುಮಾರ್,
ಮಹಿಳಾ ಸಂಘದ ಅಧ್ಯಕ್ಷರಾದ ಗೀತಾ ರಂಗನಾಥ್, ಉಪಾಧ್ಯಕ್ಷೆ ಛಾಯಾ, ಕಾರ್ಯದರ್ಶಿ ಪುಷ್ಪ ಕುಮಾರ್, ಖಜಾಂಚಿ ಸೌಮ್ಯ ಬಸವರಾಜ್, ಸಂಘಟನಾ ಕಾರ್ಯದರ್ಶಿ ರಶ್ಮಿ ಎಂ, ಸಹ ಕಾರ್ಯದರ್ಶಿ ಮಧು ಅರುಣ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಉಪಸ್ಥಿತರಿದ್ದರು.
2 days ago | [YT] | 26
View 0 replies
Udaya Saakshi
ಅಪರಿಚಿತರಿಗೆ ಮನೆ ಬಾಡಿಗೆ ನೀಡುವಾಗ ಎಚ್ಚರವಹಿಸಿ : ಪಿಎಸ್ಐ ತಿರುಮಲೇಶ್ ಜಿ ನಾಯಕ್
ಶಿವಮೊಗ್ಗ, ಜುಲೈ 11: ‘ಅಪರಿಚಿತರಿಗೆ ಮನೆ ಬಾಡಿಗೆ ನೀಡುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಬಾಡಿಗೆದಾರರ ವಿಳಾಸ ಮಾಹಿತಿ, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆ ಸಂಗ್ರಹಿಸಬೇಕು. ಸಾಧ್ಯವಾದರೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಬಾಡಿಗೆದಾರರ ಪೂರ್ವಾಪರ ಪರಿಶೀಲಿಸಬೇಕು’ ಎಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಜಿ ನಾಯಕ್ ಸಲಹೆ ನೀಡಿದ್ದಾರೆ.
11/07/2026 ರಂದು ಶಿವಮೊಗ್ಗದ ಆದರ್ಶ ನಗರದಲ್ಲಿ ವಿನೋಬನಗರ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ನಾಗರಿಕರು ಜಾಗೃತರಾಗಬೇಕು. ಮೊಬೈಲ್ ಪೋನ್ ಗೆ ಬರುವ ‘ಎಪಿಕೆ ಫೈಲ್’ ಗಳನ್ನು ತೆರೆಯಬಾರದು. ವಿವಿಧ ಆಮಿಷಗಳನ್ನೊಡುವ ಲಿಂಕ್ ಗಳನ್ನು ಕೂಡ ತೆರೆಯಬಾರದು. ಬೆದರಿಕೆ ಕರೆಗಳು, ಸಂದೇಶಗಳನ್ನು ಸ್ವೀಕರಿಸಿದ ವೇಳೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ನಿಮ್ಮ ಏರಿಯಾಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಬೇಕು. ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿ. ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿಡಲಾಗುವುದು. ನಾಗರಿಕರ ಸಹಕಾರವಿದ್ದರೆ, ಕಾನೂನು – ಸುವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವಾಸಿಗಳ ಅಹವಾಲು : ಬಡಾವಣೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ಗಸ್ತು ಹೆಚ್ಚಿಸಬೇಕು. ಬೀಟ್ ಪಾಯಿಂಟ್ ಗಳನ್ನು ಮಾಡಬೇಕು ಎಂಬುವುದು ಸೇರಿದಂತೆ ವಿವಿಧ ಅಹವಾಲುಗಳನ್ನು ನಾಗರಿಕರು ಸಭೆಯ ಮುಂದಿಟ್ಟರು. ಸದರಿ ಸಮಸ್ಯೆಗಳ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳಲಾಗುವುದು ಎಂದು ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಜಿ ನಾಯಕ್ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತ ಬಿ ರೇಣುಕೇಶ್, ಪೊಲೀಸ್ ಬೀಟ್ ಸಿಬ್ಬಂದಿ ಆಕಾಶ್, ಆದರ್ಶ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಉಮೇಶ್ ಹಿರೇಮಠ, ಕಾರ್ಯದರ್ಶಿ ಸಂತೋಷ್, ಖಜಾಂಚಿ ತಿಪ್ಪೇಸ್ವಾಮಿ, ಸ್ಥಳೀಯ ಪ್ರಮುಖರಾದ ಪೊಲೀಸ್ ಶಿವಪ್ಪ, ವೇದಾಂತ್ ಆಚಾರ್ಯ, ಶ್ರೀನಿವಾಸ್, ಮೋಹನ್, ಮಂಜುನಾಥ್, ಶೃತಿ ಸಂತೋಷ್, ಸಿಂಚನ, ನೀಲಮ್ಮ, ನವ್ಯಾ ನಾಗೇಶ್ ಸೇರಿದಂತೆ ಮೊದಲಾದವರಿದ್ದರು.
3 days ago | [YT] | 3
View 0 replies
Udaya Saakshi
ಶಿವಮೊಗ್ಗದ ಎಸ್.ಆರ್.ಎನ್.ಎಂ : ಪ್ರಥಮ ವರ್ಷದ ವಿದ್ಯಾರ್ಥಿಗಳಿ ಅಭಿವಿನ್ಯಾಸ 'ಪರಿಚಯ-2026'
ವಿಭಿನ್ನ ಚಿಂತನೆ ಸಾಧನೆಯ ಉತ್ತುಂಗದ ದಾರಿ : ಉದ್ಯಮಿ ನಿವೇದನ್ ನೆಂಪೆ
ಶಿವಮೊಗ್ಗ: ಭವಿಷ್ಯವನ್ನು ರೂಪಿಸುವ ಶಕ್ತಿ ವಿಭಿನ್ನ ಚಿಂತನೆಯಲ್ಲಿದ್ದು, ಸಾಧನೆಯ ಉತ್ತುಂಗದ ದಾರಿಯಾಗಿ ತೆರೆದುಕೊಳ್ಳಲಿದೆ ಎಂದು ಖ್ಯಾತ ಉದ್ಯಮಿ ನಿವೇದನ್ ನೆಂಪೆ ಹೇಳಿದರು.
ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ಅನ್ವಯಿಕ ವಿಜ್ಞಾನ ಕಾಲೇಜಿನ (ಎಸ್.ಆರ್.ಎನ್.ಎಂ) ವತಿಯಿಂದ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ 'ಪರಿಚಯ-2026' ಉದ್ಘಾಟಿಸಿ ಮಾತನಾಡಿದರು.
ಜನರು ನಿಮ್ಮ ಆಲೋಚನೆಯನ್ನು ನೋಡಿ ನಗುತ್ತಿದ್ದರೆ ಬೇಸರಪಡಬೇಡಿ. ಏಕೆಂದರೆ ನಿಮ್ಮ ಆಲೋಚನೆಯ ಅಲೆ, ಸಾಮಾನ್ಯರಿಗಿಂತ ಎತ್ತರದಲ್ಲಿದೆ ಎಂಬುದು ಅದರ ಸಂಕೇತ. ಇತಿಹಾಸದಲ್ಲಿ ಸಮಾಜವನ್ನು ಬದಲಿಸಿದ ಪ್ರತಿಯೊಂದು ವಿಭಿನ್ನ ಆಲೋಚನೆಗಳು ಆರಂಭದಲ್ಲಿ ಟೀಕೆ, ಹಾಸ್ಯ ಮತ್ತು ಅನುಮಾನಗಳಿಗೆ ಗುರಿಯಾಗಿದ್ದವು ಎಂಬುದು ನೆನಪಿಡಿ.
ಇಂದಿನ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಸಾಕಾಗುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ತಂತ್ರಜ್ಞಾನದ ಅರಿವು, ಸಂವಹನ ಕೌಶಲ್ಯತೆ ಮತ್ತು ನವೋದ್ಯಮದ ಮನೋಭಾವವು ಬೇಕಾಗಿದೆ. ಆದ್ದರಿಂದ ಯುವ ಸಮೂಹ ಪ್ರತಿದಿನ ಹೊಸ ಕೌಶಲ್ಯಗಳನ್ನು ಕಲಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಸಂಪ್ರದಾಯಬದ್ಧ ಚೌಕಟ್ಟಿನಿಂದ ಹೊರಬಂದು ವಾಸ್ತವತೆಗೆ ಬೇಕಾದಂತೆ, ಸೃಜನಶೀಲವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಿ. ಉದ್ಯೋಗವನ್ನು ಹುಡುಕುವವರಾಗುವುದಕ್ಕಿಂತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವವರಾಗಿ. ಪೋಷಕರು ಅನಗತ್ಯ ಒತ್ತಡ ಹೇರದೆ, ಮಕ್ಕಳ ಆಸಕ್ತಿಗಳಿಗೆ ತಕ್ಕಂತೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಯುವ ಸಮೂಹವು ವಾಸ್ತವ ಜಗತ್ತಿನ ಅರಿವನ್ನು ಬೆಳೆಸಿಕೊಳ್ಳಲು ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು.
ಮೊಬೈಲ್ಗಳ ಅತಿಯಾದ ಬಳಕೆಯ ಮೋಹಕ್ಕೆ ಒಳಗಾಗಬೇಡಿ. ದಿನಪತ್ರಿಕೆಗಳು, ಪುಸ್ತಕಗಳು ಮತ್ತು ವಿಶ್ವಾಸಾರ್ಹ ಮಾಹಿತಿಯ ಮೂಲಗಳ ಮೂಲಕ ಜ್ಞಾನವನ್ನು ವಿಸ್ತರಿಸಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ಓದುವ ಅಭ್ಯಾಸವು ಉತ್ತಮ ಚಿಂತನೆ, ಸ್ಪಷ್ಟತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಬಿಸಿಎ, ಬಿಎಸ್ಸಿ ವಿಭಾಗದಲ್ಲಿ ಕುವೆಂಪು ವಿವಿಯ ರ್ಯಾಂಕ್ ಪಡೆದ 7 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ಲೇಸ್ಮೆಂಟ್ ಅಧಿಕಾರಿ ಪ್ರದೀಪ್.ಜಿ.ಎಸ್ ಉದ್ಯೋಗವಕಾಶಗಳ ಬಗ್ಗೆ ಹಾಗೂ ಆಯಿಶಾ ರೆಹಮಾನ್ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕರಾದ ಡಾ.ಮುಕುಂದ ಸ್ವಾಗತಿಸಿ, ರೇಖಾ ವಂದಿಸಿ, ಲಕ್ಷ್ಮಣ್ ನಿರೂಪಿಸಿದರು.
Different thinking is the path to peak achievement: Entrepreneur Nivedan Nempe | Shivamogga: The power to shape the future lies in different thinking, which will open up as the path to peak achievement, said renowned entrepreneur Nivedan Nempe.
He was speaking while inaugurating the orientation program 'Parichaya-2026' for first-year BCA and BSC students organized by the city's S.R. Nagappashetty Memorial College of Applied Sciences (SRNM) at the Kuvempu Theatre on Friday. #shimoga #shivamogga #news #NewsUpdate #ಶಿವಮೊಗ್ಗ
3 days ago | [YT] | 11
View 0 replies
Udaya Saakshi
ರಸ್ತೆಯಲ್ಲಿ ಸಿಕ್ಕಿದ ತಾಳಿ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಹೊಳೆಹೊನ್ನೂರಿನ ರಾಮಪ್ಪ
ಶಿವಮೊಗ್ಗ, ಜುಲೈ 11: ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಮಾಂಗಲ್ಯ ಸರವನ್ನು, ವ್ಯಕ್ತಿಯೋರ್ವರು ಪೊಲೀಸರ ಮೂಲಕ ಮಹಿಳೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದು, ಜನಮೆಚ್ಚುಗೆಗೆ ಪಾತ್ರರಾದ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದಿದೆ.
9/07/2026 ರಂದು ಹೊಳೆಹೊನ್ನೂರು ಪಟ್ಟಣದಲ್ಲಿ ಮಂಜಮ್ಮ ಎಂಬುವರು ಆಕಸ್ಮಿಕವಾಗಿ 14 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಎಲ್ಲೆಡೆ ಹುಡಿಕಿದರೂ ಸರ ಸಿಕ್ಕಿರಲಿಲ್ಲ.
ಈ ನಡುವೆ ಸದರಿ ಸರವು ಎನ್.ಟಿ. ಸರ್ಕಲ್ ನಲ್ಲಿ ರಾಮಪ್ಪ ಎಂಬುವರಿಗೆ ಸಿಕ್ಕಿತ್ತು. ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ, ರಾಮಪ್ಪರವರು ಮಾಂಗಲ್ಯ ಸರ ಸಿಕ್ಕಿರುವ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಈ ನಡುವೆ ಮಂಜಮ್ಮ ಅವರು ಸರ ಕಳೆದು ಹೋಗಿರುವ ಕುರಿತಂತೆ ದೂರು ನೀಡಲು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಸರ ಸಿಕ್ಕಿರುವ ಕುರಿತಂತೆ ಮಂಜಮ್ಮರಿಗೆ ಪೊಲೀಸರು ಮಾಹಿತಿ ನೀಡಿ, ರಾಮಪ್ಪರ ಮೂಲಕವೇ ತಾಳಿ ಸರ ಹಿಂದಿರುಗಿಸಿದ್ದಾರೆ. ರಾಮಪ್ಪರವರ ಪ್ರಾಮಾಣಿಕತೆಗೆ ಸ್ಥಳೀಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Ramappa of Holehonnur showed his honesty by returning a necklace found on the road
3 days ago | [YT] | 5
View 0 replies
Load more